BREAKING
ದಕ್ಷಿಣ ಕನ್ನಡ

Sullia ವಿವಾಹಿತ ಯುವಮಹಿಳೆಯ ಹಠಾತ್ ಮೃತ್ಯು, ಮಗಳ ಸಾವಿನ ಬಗ್ಗೆ ಶಂಕೆ- ಹೆತ್ತವರಿಂದ ಪೊಲೀಸ್ ದೂರು


ಸುಳ್ಯ,ಜುಲೈ20 : ವಿವಾಹಿತ ಯುವ ಮಹಿಳೆಯೋರ್ವರು ಹಠಾತ್ತನೆ ಸಾವನ್ನಪ್ಪಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದ್ದು ಕುಟುಂಬಸ್ಥರು ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲದಲ್ಲಿ ಈ ಘಟನೆ ನಡೆದಿದ್ದು ಸಾವಿನ ಬಗ್ಗೆ ಮಹಿಳೆಯ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸ್‌ ದೂರು ನೀಡಿದ್ದಾರೆ.   ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ 22 ವರ್ಷದ ಫಾತಿಮತ್ ನಿಶಾನ ಮೃತಪಟ್ಟ ಮಹಿಳೆಯಾಗಿದ್ದಾರೆ.  ಫಾತಿಮತ್ ನಿಶಾನಳ ಮೃತದೇಹವನ್ನು ಪ್ರಥಮವಾಗಿ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಫಾತಿಮತ್ ನಿಶಾನ ಪುತ್ತೂರು ತಾಲೂಕು ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿಯಾಗಿದ್ದು ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಫಾತಿಮತ್ ನಿಶಾನ ಗಂಡನ ಕುಟುಂಬವು ಮೊದಲು ದೇವರಕೊಲ್ಲಿಯಲ್ಲಿ ವಾಸಿಸುತ್ತಿದ್ದು ಇದೀಗ ಕೆಲವು ವರ್ಷಗಳಿಂದ ಸಂಪಾಜೆಯಲ್ಲಿ ನೆಲೆಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!