ಮಂಗಳೂರು,ಜುಲೈ 15 : 1965 ಇಂಡಿಯ- ಪಾಕಿಸ್ತಾನಯುದ್ದ,1971 ರ ಪಾಕಿಸ್ತಾನ ವಿರುದ್ದದ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತಕ್ಕೆ ವಿಜಯ ತಂದು ಕೊಟ್ಟ ಹೆಮ್ಮೆಯ T-55 ಯುದ್ಧ ಟ್ಯಾಂಕ್ ಇದೀಗ ಮಂಗಳೂರು ನಗರದ ಕದ್ರಿ ಬಳಿ ಸಾರ್ವಜನಿಕ ಪ್ರದರ್ಶನಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುತುವರ್ಜಿಯಿಂದ ಈ ಮಹತ್ವದ ಕಾರ್ಯ ಸಾಧ್ಯವಾಗಿದೆ.
ಕಳೆದ ವರ್ಷ ಪೂನಾದಿಂದ ಈ T-55 ಹಳೇ ಯುದ್ಧ ಟ್ಯಾಂಕ್ ಅನ್ನು ಮಂಗಳೂರಿಗೆ ತರಿಸಲಾಗಿತ್ತು.ಭಾರತೀಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ಹಳೇ ಟ್ಯಾಂಕ್ ರಷ್ಯಾ ನಿರ್ಮಿತ (USSR) ವಾಗಿದೆ. ಭಾರತ ಪಾಕ್ ಯುದ್ದ, ಬಾಂಗ್ಲಾ ದೇಶದ ವಿಮೋಚನ ಯುದ್ಧದಲ್ಲಿ ಈ ಟ್ಯಾಂಕ್ ಮಹತ್ತ್ವದ ಪಾತ್ರ ವಹಿಸಿತ್ತು. ಮಾತ್ರವಲ್ಲ ಭಾರತಕ್ಕೆ ಜಯ ತಂದುಕೊಟ್ಟಿತ್ತು. ಯುದ್ಧದಿಂದ ನಿವೃತ್ತಿ ಬಳಿಕ ಪೂನಾದ ಕಿರ್ಕೀ ಡಿಫೆನ್ಸ್ ಡಿಪೊದಲ್ಲಿ ಇರಿಸಲಾಗಿತ್ತು. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಮನವಿಯಂತೆ ಮಂಗಳೂರಿನಲ್ಲಿ ಈ ಟ್ಯಾಂಕ್ ಅನ್ನು ಸ್ಪೂರ್ತಿದಾಯಕ ಪ್ರದರ್ಶನಕ್ಕೆ ಇರಿಸುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಂದ ಅನುಮತಿ ಪಡೆದಿದ್ದರು.
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿಗೆ ಕಳೆದ ವರ್ಷ ತರಿಸಿದ್ದರು. ಮನಪಾ ವತಿಯಿಂದಲೇ ಇದನ್ನು ನಿರ್ವಹಿಸಲಾಗುತ್ತಿದ್ದು, ನಗರದ ಕದ್ರಿ ವಾರ್ ಮೆಮೊರಿಯಲ್ ಬಳಿ ಇದಕ್ಕೆ ವೇದಿಕೆ ನಿರ್ಮಿಸಿ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಬುಧವಾರ ಸಂಜೆ ಕ್ರೇನ್ ಬಳಸಿ ಟ್ಯಾಂಕ್ ಅನ್ನು ವ್ಯವಸ್ಥಿತವಾಗಿ 38ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವೇದಿಕೆಯ ಮೇಲೆ ಇರಿಸಲಾಯಿತು. ಸಂಪೂರ್ಣ ಕಾರ್ಯದ ಬಳಿಕ ಅತ್ಯದ್ಬುತ ತ-55 ಟ್ಯಾಂಕ್ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ವಾಗಲಿದೆ.