BREAKING
ದೇಶ

Kanpur Sad story ತೀವೃ ಆನಾರೋಗ್ಯದ ಕಾರಣ, ಪತ್ರ ಬರೆದಿಟ್ಟು ವಿವಾಹಿತೆ ಜೀವಾಂತ್ಯ


ಕಾನ್ಪುರ, ಜುಲೈ 18 : ತೀವ್ರ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ 28 ವರ್ಷದ ವಿವಾಹಿತೆ ತನ್ನ ಅನಾರೋಗ್ಯದ ಕಾರಣ ಜೀವಾಂತ್ಯ ಮಾಡಿಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.   ಘಟನಾ ಸ್ಥಳದಲ್ಲಿ ಪತ್ತೆಯಾದ ಕೈಬರಹದ ಪತ್ರದಲ್ಲಿ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪತಿ ಹಾಗೂ ಅತ್ತೆ-ಮಾವನ ಪ್ರೀತಿ, ಕಾಳಜಿಯನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. 

ಸುಮಾರು ಮೂರು ವರ್ಷಗಳ ಹಿಂದೆ ಶಿವಂ ಶುಕ್ಲಾ ಅವರನ್ನು ವಿವಾಹವಾಗಿದ್ದ ವೈಷ್ಣವಿಗೆ ಒಂದು ಪುಟ್ಟ ಮಗನಿದ್ದಾನೆ. ಹಲವು ವರ್ಷಗಳಿಂದ ಗಂಭೀರ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಾನ್ಪುರ ಹಾಗೂ ದೆಹಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಸುಧಾರಿಸದ ಕಾರಣ ಮಾನಸಿಕವಾಗಿ ತೀವ್ರ ನೊಂದಿದ್ದರು ಎನ್ನಲಾಗಿದೆ.

ಸಾವಿಗೂ ಮುನ್ನ ಬರೆದ ಪತ್ರದಲ್ಲಿ, “ನನ್ನ ಅನಾರೋಗ್ಯದ ಅಸಹಾಯಕತೆಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಸಾವಿಗೆ ಯಾರನ್ನೂ ಹೊಣೆ ಮಾಡಬೇಡಿ. ಇಂಥ ಅತ್ತೆ-ಮಾವ ಮತ್ತು ಕುಟುಂಬವನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಎಲ್ಲರೂ ನನ್ನನ್ನು ತಾಯಿಯಂತೆ ನೋಡಿಕೊಂಡಿದ್ದಾರೆ,” ಎಂದು ಬರೆದಿದ್ದಾರೆ. ಅಲ್ಲದೆ, ತಮ್ಮ ಸ್ಕೂಟರ್, ಆಭರಣಗಳು ಹಾಗೂ ಮೊಬೈಲ್‌ ಫೋನ್‌ ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಇಚ್ಛೆಯನ್ನು ದಾಖಲಿಸಿದ್ದಾರೆ.

ವೈಷ್ಣವಿ ಇತ್ತೀಚೆಗೆ ದೆಹಲಿ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಅನಾರೋಗ್ಯದಿಂದಾಗಿ ಮುಂದಿನ ಹಂತದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕವೂ ಅವರನ್ನು ಕಾಡುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಆರೋಪ ಅಥವಾ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!