ಮಂಗಳೂರು,ಜುಲೈ21: ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮಂಗಳೂರು ಹಾಪ್ಕಾಮ್ಸ್ ಪ್ರಧಾನ ವ್ಯವಸ್ಥಾಪಕ ರವಿ ಶೆಟ್ಟಿ ದಾರುಣ ಅಂತ್ಯ ಕಂಡಿದ್ದಾರೆ ಕಾರಿನಲ್ಲಿದ್ದ ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ.
ರವಿ ಶೆಟ್ಟಿ ಅವರು ಸ್ನೇಹಿತರೊಂದಿಗೆ ತಿರುಪತಿ ಯಾತ್ರೆ ಮುಗಿಸಿಕೊಂಡು ಸೋಮವಾರ ಮಂತ್ರಾಲಯದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ಮುಂಜಾನೆ ಮಂತ್ರಾಲಯ ತಲುಪಲು ಕೇವಲ 1 ರಿಂದ 2 ಕಿಲೋಮೀಟರ್ ಅಂತರವಿದ್ದಾಗ, ರವಿ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಹಠಾತ್ ನಿಯಂತ್ರಣ ತಪ್ಪಿ ರಸ್ತೆಬದಿಯ ಮೋರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರವಿ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅದೇ ಕಾರಿನಲ್ಲಿದ್ದ ಪುರುಷೋತ್ತಮ ಭಂಡಾರಿ, ಸುದೇಶ್ ರೈ ಹಾಗೂ ಪ್ರದೀಪ್ ಅಳ್ವ ಅವರು ಗಾಯಗೊಂಡಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ರವಿ ಶೆಟ್ಟಿ ಮಂಗಳೂರು ನಗರದ ಅಶೋಕ್ ನಗರದವರಾಗಿದ್ದು ಮಂಗಳೂರು ಹಾಪ್ಕಾಮ್ಸ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ನಲ್ಲಿ ಜೊತೆ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಮಂಗಳೂರಿನ ಹಲವಾರು ಸಾಂಸ್ಕೃತಿಕ, ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಧಾರ್ಮಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.