ಉಡುಪಿ, ಜುಲೈ 03: ಮುಂಬಾಯಿ - ಮಂಗಳೂರು ಮಧ್ಯೆ ಸಂಚರಿಸುವ ಮತ್ಸ್ಯಾ ಗಂಧ ಎಕ್ಸ್ಪ್ರೆಸ್ (12619) ರೈಲಿನಲ್ಲಿ ಯಾವುದೇ ಟಿಕೆಟ್ ಅಥವಾ ದಾಖಲೆಗಳು ಇಲ್ಲದೆ ಐವರು ಅಪ್ರಾಪ್ತ ಬಾಲಕರನ್ನು ಕೊಂಕಣ್ ರೈಲ್ವೇ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಮತ್ಸ್ಯಾ ಗಂಧ ಎಕ್ಸ್ಪ್ರೆಸ್ ರೈಲು ಬಾರಕೂರು ಉಡುಪಿ ನಡುವೆ ಸಂಚರಿಸುತ್ತಿದ್ದ ವೇಳೆ ಟಿಟಿಇ ಸಬಿತಾ ಶೆಟ್ಟಿ ಅವರು ಪ್ರಯಾಣಿಕರ ಟಿಕೆಟ್ ಪರಿಶೀಲಿಸುತ್ತಿದ್ದ ವೇಳೆ ಈ ಐವರು ಅಪ್ರಾಪ್ತ ಬಾಲಕರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದು ಯಾವುದೇ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು.
ಈ ಬಗ್ಗೆ ರೈಲ್ವೇ ಸುರಕ್ಷಾ ದಳಕ್ಕೆ ಮಾಹಿತಿ ರವಾನೆ ಮಾಡಿ ಐವರು ಅಪ್ರಾಪ್ತ ಬಾಲಕನ್ನು ರಕ್ಷಿಸಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿ (Child Welfare Committee) ಸುಪರ್ದಿಗೆ ನೀಡಲಾಯಿತು.
ಬಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಕೌಟುಂಬಿಕ ವಿಚಾರವಾಗಿ ಮನೆಯಲ್ಲಿ ಹೇಳದೆ ರೈಲು ಹತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಕ್ಕಳ ಪಾಲಕರಿಗೂ ಮಾಹಿತಿ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.