ಮಂಗಳೂರು, ಜುಲೈ 03 : ಮಂಗಳೂರು ಮಹಾನಗರ ಪಾಲಿಕೆಯ 52ನೇ ವಾರ್ಡ್ನ ಬಲ್ಲೂರುಗುಡ್ಡೆ ಪ್ರದೇಶದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಗುಡ್ಡೆ ಕುಸಿತದ ಅಪಾಯ ಎದುರಾಗಿದ್ದು ಸ್ಥಳಿಯರು ಜೀವ ಭಯದಿಂದ ದಿನ ದೂಡುತ್ತಿದ್ದಾರೆ.
ಮಂಗಳೂರು ನಗರದ ನಾಗುರಿಯಲ್ಲಿ ತಡೆಗೋಡೆ ಕುಸಿದ ಪರಿಣಾ ಮೂವರು ಜೀವ ಕಳೆದುಕೊಂಡಿದ್ದು ಇದೀಗ ಇದೇ ಭಯ ಬಲ್ಲೂರು ಗುಡ್ಡೆ ನೀವಾಸಿಗಳಲ್ಲಿ ಮನೆ ಮಾಡಿದೆ. ಆದ್ದರಿಂದ ಮಂಗಳೂರು ಪಾಲಿಕೆ, ಜನ ಪ್ರತಿನಿಧಿಗಳು ಇಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳು ಆತಂಕದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ. ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಬಿಜೆಪಿ ಕಾರ್ಪೊರೇಟರ್ ಹಾಗೂ ಬಿಜೆಪಿ ಶಾಸಕರ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ, ಶಾಶ್ವತ ಪರಿಹಾರ ಕಲ್ಪಿಸುವ ಕೆಲಸಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಗುಡ್ಡೆ ಕುಸಿತದಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ರಕ್ಷಣಾ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ..