ಕಾಸರಗೋಡು: ಕೇರಳ ಕಾಸರಗೋಡಿನ ಎನ್ನಪ್ಪರದಲ್ಲಿನ CPIM ಸಮಿತಿಯ ಕಚೇರಿಯಲ್ಲಿ ದಾಂಧಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ತಯನ್ನೂರ್ ನಿವಾಸಿಗಳಾದ ವಿಶಾಲ್ ಕೆ. ಬಾಬು ಮತ್ತು ಅಭಿನವ್ ಬಂಧಿತ ಆರೋಪಿಗಳಾಗಿದ್ದಾರೆ.
ಎನ್ನಪ್ಪರದಲ್ಲಿನ CPIM ಕಚೇರಿ ಬುಧವಾರ ಧ್ವಂಸಗೊಂಡ ಸ್ಥಿತಿಯಲ್ಲಿಕಂಡು ಬಂದಿತ್ತು. ಕಚೇರಿಯ ಕಿಟಕಿಯ ಗಾಜುಗಳು, ಪೀಠೋಪಕರಣಗಳು ಹಾಗೂ ಧ್ವಜ ಸ್ತಂಭಗಳಿಗೆ ಹಾನಿ ಮಾಡಲಾಗಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೊತ್ತ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು.
ಸಮೀಪದ ಮನೆಗಳು ಹಾಗೂ ಅಂಗಡಿಗಳ ಬಳಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಮೂಲಕ, ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿ ಪೆರಿಯಾರಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರೂ ಆರೋಪಿಗಳನ್ನು ಬುಧವಾರ ಸಂಜೆ ಬಂಧಿಸಿ, ವಿಚಾರಣೆಗೊಳಪಡಿಸಲಾಯಿತು ಎಂದು ವರದಿಯಾಗಿದೆ.
ನಮಗೆ ಶಾಲಾ ದಿನಗಳಿಂದಲೂ ಸಿಸಿಐ(ಎಂ) ಬಗ್ಗೆ ಅಸಮಾಧಾನವಿತ್ತು ಎಂದು ವಿಚಾರಣೆಯ ವೇಳೆ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಪೈಕಿ ಓರ್ವ ಇತ್ತೀಚೆಗಷ್ಟೇ ವಿದೇಶದಿಂದ ರಾಜ್ಯಕ್ಕೆ ಮರಳಿದ್ದ. ಘಟನೆ ನಡೆದ ವೇಳೆ ಇಬ್ಬರೂ ಆರೋಪಿಗಳು ಪಾನಮತ್ತರಾಗಿದ್ದರು ಎಂದೂ ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.