BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangaluru ಚೆಕ್ ಅಮಾನ್ಯ ಪ್ರಕರಣ, JMFC ಕೋರ್ಟಿನ ಖುಲಾಸೆ ತೀರ್ಪು ರದ್ದುಗೊಳಿಸಿ ದುಪ್ಪಟ್ಟು ದಂಡ ವಿಧಿಸಿದ ಕೌಟುಂಬಿಕ ನ್ಯಾಯಾಲಯ

ಮಂಗಳೂರು, ಜುಲೈ 07 :  ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಖುಲಾಸೆ ತೀರ್ಪು ರದ್ದುಗೊಳಿಸಿ, ಆರೋಪಿಗೆ ದುಪ್ಪಟ್ಟು ದಂಡ ವಿಧಿಸುವ ಮೂಲಕ ಚೆಕ್ ಬೌನ್ಸ್ ಆರೋಪಿಗೆ ಮಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯ ಬಿಸಿ ಮುಟ್ಟಿಸಿದೆ.



ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕೆ. ಲಕ್ಷ್ಮೀನಾರಾಯಣ ಭಟ್ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ಮಂಗಳೂರಿನ ಮರೋಳಿ ನಿವಾಸಿ, ಆರೋಪಿ ಗುರುರಾಜ್ ಮತ್ತು ಅವರ ಪತ್ನಿ ಲಕ್ಷ್ಮೀ ಗುರುರಾಜ್ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಕ್ರಮವಾಗಿ  ರೂ. ಒಂದು ಲಕ್ಷ ಮತ್ತು ರೂ. 75 ಸಾವಿರ ಸಾಲವಾಗಿ ಪಡೆದುಕೊಂಡಿದ್ದರು. ಆದರೆ, ಪಡೆದ ಸಾಲವನ್ನು ಕರಾರಿನಂತೆ ಮರುಪಾವತಿ ಮಾಡದೇ ಸುಸ್ತಿದಾರರಾಗಿದ್ದರು.

ಈ ಸಾಲದ ಮರುಪಾವತಿಗೆ ಗುರುರಾಜ್‌ ಎರಡು ಚೆಕ್‌ಗಳನ್ನು ನೀಡಿದ್ದರು. ಚೆಕ್‌ ನಗದೀಕರಣಕ್ಕೆ ಹಾಜರುಪಡಿಸಿದಾಗ ಎರಡೂ ಚೆಕ್‌ಗಳೂ "ಖಾತೆಯನ್ನು ಮುಕ್ತಾಯಗೊಳಿಸಲಾಗಿದೆ" (Account Closed) ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತ್ತು. 

ಈ ಬಗ್ಗೆ ಬ್ಯಾಂಕ್ ಲೀಗಲ್ ನೋಟೀಸ್ ಜಾರಿಗೊಳಿಸಿ ಮಂಗಳೂರಿನ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಗುರುರಾಜ್ ಅವರನ್ನು ಎರಡೂ ಪ್ರಕರಣದಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಬ್ಯಾಂಕ್, ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಧ ಲಕ್ಷ್ಮೀನಾರಾಯಣ, ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪನ್ನು ಬದಿಗಿರಿಸಿ ಮೇಲ್ಮನವಿಯನ್ನು ಪುರಸ್ಕರಿಸಿದರು. ಮಾತ್ರವಲ್ಲದೆ, ಆರೋಪಿ ಗುರುರಾಜ್ ನೀಡಿದ ಚೆಕ್‌ನ ದುಪ್ಪಟ್ಟು ಮೌಲ್ಯವನ್ನು ಮೇಲ್ಮನವಿದಾರರಿಗೆ ನೀಡುವಂತೆ ಆದೇಶಿಸಿದೆ. 

ತಲಾ 2,74,000/- ಮತ್ತು 2,60,000/- ಮೊತ್ತವನ್ನು ಪರಿಹಾರವಾಗಿ ಬ್ಯಾಂಕ್ ಗೆ ನೀಡುವಂತೆ ಆರೋಪಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಮೇಲ್ಮನವಿದಾರ ಬ್ಯಾಂಕ್ ಪರವಾಗಿ ಮಂಗಳೂರಿನ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!